ಅನಾರೋಗ್ಯ ಮಹಿಳೆಯನ್ನು 10 ಕಿ.ಮೀ ಸ್ಟ್ರೆಚರ್ ನಲ್ಲಿ ಸಾಗಿಸಿದ ಗ್ರಾಮಸ್ಥರು: ಬೆಳಗಾವಿಯ ಖಾನಾಪುರ ತಾಲ್ಲೂಕಿನ ಅಮ್ಗಾಂವ್ ಗ್ರಾಮಸ್ಥರ ದುಸ್ಥಿತಿ! ಖಾನಾಪುರದ ಅರಣ್ಯದಲ್ಲಿರುವ ಹಲವು ಗ್ರಾಮಗಳಿಗೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ರಸ್ತೆ, ವಿದ್ಯುತ್‌ನಂತಹ ಮೂಲ ಸೌಕರ್ಯಗಳಿಲ್ಲ. ಬೆಳಗಾವಿ: ರಸ್ತೆ, ಸಾರಿಗೆ ಸೌಕರ್ಯಗಳಿಲ್ಲದೆ, ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುವ ಮಂದಿ ಈಗಲೂ ಕುಗ್ರಾಮಗಳಲ್ಲಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ 38 ವರ್ಷದ ಮಹಿಳೆಯನ್ನು ಗ್ರಾಮಸ್ಥರು ಕೈಯಿಂದ ಮಾಡಿದ ಸ್ಟ್ರೆಚರ್‌ನಲ್ಲಿ 10 ಕಿಲೋಮೀಟರ್ ದೂರದ ಪಶ್ಚಿಮ ಘಟ್ಟದ ಖಾನಾಪುರ ಅರಣ್ಯ ಪ್ರದೇಶದ ಕಡಿದಾದ ದಾರಿಯಲ್ಲಿ ಹೊತ್ತೊಯ್ದು ಸಕಾಲದಲ್ಲಿ ವೈದ್ಯಕೀಯ ಸೇವೆ ಸಿಗುವಂತೆ ಮಾಡಿದ್ದಾರೆ. ನಿನ್ನೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಬೆಳಗಾವಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಳ್ಳುತ್ತಿದ್ದಾರೆ.ಆಗಿದ್ದೇನು?: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದ ಪಶ್ಚಿಮ ಘಟ್ಟದಲ್ಲಿ 38 ವರ್ಷದ ತೀವ್ರ ಅಸ್ವಸ್ಥ ಮಹಿಳೆಯನ್ನು ಗ್ರಾಮಸ್ಥರು ಕೈಯಿಂದ ತಯಾರಿಸಿದ ಸ್ಟ್ರೆಚರ್‌ನಲ್ಲಿ ಸುಮಾರು 10 ಕಿಲೋಮೀಟರ್ ಕಡಿದಾದ ದಾರಿಯಲ್ಲಿ ಕಷ್ಟಪಟ್ಟು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.ಖಾನಾಪುರದ ಇತರ ಅನೇಕ ದೂರದ ಹಳ್ಳಿಗಳಂತೆ ಮೂಲಭೂತ ಸೌಕರ್ಯಗಳ ಕೊರತೆಯಿರುವ ಅಮ್ಗೌನ್ ಗ್ರಾಮಸ್ಥರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ 38 ವರ್ಷದ ಹರ್ಷದ ಹರಿಶ್ಚಂದ್ರ ಘಾಡಿ ಎಂಬ ಮಹಿಳೆ ತೀವ್ರ ಅನಾರೋಗ್ಯಕ್ಕೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ವೈದ್ಯರನ್ನು ಕರೆದುಕೊಂಡು ಬರಲು ಕಡಿದಾದ ದಾರಿಯಲ್ಲಿ ಯಾರೂ ಬರಲು ಸಿದ್ಧರಿರಲಿಲ್ಲ. ಆಗ ಗ್ರಾಮಸ್ಥರು ಸೇರಿಕೊಂಡು ಕೈಯಿಂದ ತಯಾರಿಸಿದ ಸ್ಟ್ರೆಚರ್‌ನಲ್ಲಿ 10 ಕಿ.ಮೀ ದೂರದಲ್ಲಿರುವ ಚಿಕ್ಲೆಗೆ ಕರೆದುಕೊಂಡು ಬಂದರು. ಅಲ್ಲಿಂದ ಮಹಿಳೆಯನ್ನು ಆಂಬ್ಯುಲೆನ್ಸ್ ನಲ್ಲಿ ಖಾನಾಪುರದ ಆಸ್ಪತ್ರೆಗೆ ಕರೆತರಲಾಯಿತು.ಖಾನಾಪುರ ಆಸ್ಪತ್ರೆಯಲ್ಲಿ ಮಹಿಳೆಯ ಆರೋಗ್ಯ ಸ್ಥಿತಿ ಹದಗೆಟ್ಟಾಗ, ಇಂದು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರ ಸ್ಥಿತಿ ಸ್ಥಿರವಾಗಿ ಸುಧಾರಿಸಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.ಗ್ರಾಮಸ್ಥರು ಹೇಳುವುದೇನು?: ಗ್ರಾಮಸ್ಥರು ಮಹಿಳೆಗೆ ಅಮ್‌ಗಾಂವ್‌ನಲ್ಲಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರು, ಆದರೆ ಆಕೆಯ ಸ್ಥಿತಿ ಹದಗೆಡುತ್ತಿದ್ದಂತೆ ಗ್ರಾಮಸ್ಥರೇ ಮರದ ಕೋಲುಗಳಿಂದ ಸ್ಟ್ರೆಚರ್ ನ್ನು ನಿರ್ಮಿಸಿ ಅಮ್ಗಾಂವ್ ಅರಣ್ಯದ ಪ್ರತಿಕೂಲ ಹವಾಮಾನದ ನಡುವೆ ಸುಮಾರು 25 ಗ್ರಾಮಸ್ಥರು ಕೆಸರು ಮತ್ತು ಸವಾಲಿನ ಭೂಪ್ರದೇಶದ ಮೂಲಕ ಸುಮಾರು 10 ಕಿಲೋ ಮೀಟರ್ ವರೆಗೆ ಕರೆತಂದರು.ಅಮ್ಗಾಂವ್ ಅರಣ್ಯ ಪ್ರದೇಶದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಈ ಪ್ರದೇಶ ಕೂಡ ಜನ ಸಂಚಾರಕ್ಕೆ ಅತ್ಯಂತ ಕ್ಲಿಷ್ಟವಾದದ್ದು. ಅಮ್ಗಾಂವ್‌ನಿಂದ ಚಿಕ್ಲೆಗೆ ಹೋಗುವ ಮಾರ್ಗವು ಶೋಚನೀಯವಾಗಿದೆ. ಅಮ್ಗಾಂವ್‌ನ ಶಾಲಾ ಶಿಕ್ಷಕರೊಬ್ಬರು ಚಿಕ್ಲೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.ಖಾನಾಪುರದ ಅರಣ್ಯದಲ್ಲಿರುವ ಹಲವು ಗ್ರಾಮಗಳಿಗೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ರಸ್ತೆ, ವಿದ್ಯುತ್‌ನಂತಹ ಮೂಲ ಸೌಕರ್ಯಗಳಿಲ್ಲ. ಈ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಬೇಸರದಿಂದ ಹೇಳುತ್ತಾರೆ.ಮಳೆಗಾಲದಲ್ಲಿ, ಖಾನಾಪುರದ ಅಮಗಾಂವ್‌ನಂತಹ ದೂರದ ಹಳ್ಳಿಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ, ಇದರಿಂದಾಗಿ ಗ್ರಾಮಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಲು ಎರಡು ವಾರಕ್ಕೊಮ್ಮೆ ಖಾನಾಪುರ ಪಟ್ಟಣಕ್ಕೆ ಹೋಗುವುದು ಕೂಡ ಕಷ್ಟಕರವಾಗಿದೆ. ಖಾನಾಪುರದಿಂದ ಕಷ್ಟಕರವಾದ 10 ಕಿ.ಮೀ ದೂರವನ್ನು ಇತರ ಶಿಕ್ಷಕರು ಕ್ರಮಿಸಲು ಸಾಧ್ಯವಾಗದ ಕಾರಣ ಸ್ಥಳೀಯ ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.